ಶ್ರೀ ಹುಚ್ಚರಾಯಸ್ವಾಮಮಿ ದೇವಸ್ಥಾನ ಶಿಕಾರಿಪುರ, ಶಿಕಾರಿಪುರ, ಶಿವಮೊಗ್ಗ - 577427, ಶಿವಮೊಗ್ಗ .
Sri Huccharaya Swamy Temple, Shikaripura, Shivamogga - 577427, Shivamogga District [TM000168]
×
Temple History
ಇತಿಹಾಸ
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಶಿಕಾರಿಪುರ ಪಟ್ಟಣದ ಶ್ರೀ ಹುಚ್ಚರಾಯಸ್ವಾಮಿ ದೇವಾಲಯ ಪ್ರವರ್ಗ “ಎ” ಅಧಿಸೂಚಿತ ಮುಜರಾಯಿ ದೇವಾಲಯವಾಗಿರುತ್ತದೆ. ಈ ದೇವರ ಮತ್ತೊಂದು ಹೆಸರು ಭ್ರಾಂತೇಶ ಎಂಬುದು ಇನ್ನೊಂದು ವಿಶೇಷ. ಶ್ರೀ ರಾಮಧೂತ, ವಾನರಯೋಧ, ವಾಯುಪುತ್ರ, ಹನುಮಂತ, ಆಂಜನೇಯ ಎಂದೆಲ್ಲಾ ಕರೆಸಿಕೊಳ್ಳುವ ದೇವರು ಇಲ್ಲಿ ಭ್ರಾಂತೇಶ, ಹುಚ್ಚರಾಯಸ್ವಾಮಿ ಎಂದು ಕರೆಸಿಕೊಂಡಿದ್ದಾನೆ. ಈ ದೇವಾಲಯ ಹುಚ್ಚರಾಯಕೆರೆ ದಂಡೆ ಮೇಲೆ ಹಾಗೂ ಶಿಕಾರಿಪುರ ಪಟ್ಟಣದ ಗಡಿಭಾಗದಲ್ಲಿರುತ್ತದೆ.
ಶ್ರೀ ಹುಚ್ಚರಾಯಸ್ವಾಮಿ ದೇವಾಲಯ ಸರಿ ಸುಮಾರು 17ನೇ ಶತಮಾನದ್ದು ಎಂದು ಊಹಿಸಲಾಗುವುದು ಈ ತಾಲ್ಲೂಕಿನ ಪ್ರಮುಖ ಐತಿಹಾಸಿಕ ಹಿನ್ನೆಯುಳ್ಳ ದೇವಸ್ಥಾನಗಳಲ್ಲಿ ಒಂದು. 1941ರ ಮೈಸೂರು ಪುರಾತ್ವ ಇಲಾಖೆ ವರದಿಯಂತೆ ಈ ದೇವಾಲಯವನ್ನು ನಿರ್ಮಿಸಿದವರು ವೀರಶೈವರಾದ ಹುಚ್ಚಪ್ಪಸ್ವಾಮಿ ಎನ್ನಲಾಗಿದೆ....ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಶಿಕಾರಿಪುರ ಪಟ್ಟಣದ ಶ್ರೀ ಹುಚ್ಚರಾಯಸ್ವಾಮಿ ದೇವಾಲಯ ಪ್ರವರ್ಗ “ಎ” ಅಧಿಸೂಚಿತ ಮುಜರಾಯಿ ದೇವಾಲಯವಾಗಿರುತ್ತದೆ. ಈ ದೇವರ ಮತ್ತೊಂದು ಹೆಸರು ಭ್ರಾಂತೇಶ ಎಂಬುದು ಇನ್ನೊಂದು ವಿಶೇಷ. ಶ್ರೀ ರಾಮಧೂತ, ವಾನರಯೋಧ, ವಾಯುಪುತ್ರ, ಹನುಮಂತ, ಆಂಜನೇಯ ಎಂದೆಲ್ಲಾ ಕರೆಸಿಕೊಳ್ಳುವ ದೇವರು ಇಲ್ಲಿ ಭ್ರಾಂತೇಶ, ಹುಚ್ಚರಾಯಸ್ವಾಮಿ ಎಂದು ಕರೆಸಿಕೊಂಡಿದ್ದಾನೆ. ಈ ದೇವಾಲಯ ಹುಚ್ಚರಾಯಕೆರೆ ದಂಡೆ ಮೇಲೆ ಹಾಗೂ ಶಿಕಾರಿಪುರ ಪಟ್ಟಣದ ಗಡಿಭಾಗದಲ್ಲಿರುತ್ತದೆ.
ಶ್ರೀ ಹುಚ್ಚರಾಯಸ್ವಾಮಿ ದೇವಾಲಯ ಸರಿ ಸುಮಾರು 17ನೇ ಶತಮಾನದ್ದು ಎಂದು ಊಹಿಸಲಾಗುವುದು ಈ ತಾಲ್ಲೂಕಿನ ಪ್ರಮುಖ ಐತಿಹಾಸಿಕ ಹಿನ್ನೆಯುಳ್ಳ ದೇವಸ್ಥಾನಗಳಲ್ಲಿ ಒಂದು. 1941ರ ಮೈಸೂರು ಪುರಾತ್ವ ಇಲಾಖೆ ವರದಿಯಂತೆ ಈ ದೇವಾಲಯವನ್ನು ನಿರ್ಮಿಸಿದವರು ವೀರಶೈವರಾದ ಹುಚ್ಚಪ್ಪಸ್ವಾಮಿ ಎನ್ನಲಾಗಿದೆ. ತೀರ್ಥಹಳ್ಳಿ ತಾಲ್ಲೂಕಿನ ಕವಳೆದುರ್ಗ ಮಠದಿಂದ ಬಂದು ತಾಲ್ಲೂಕಿನ ನೆಲವಾಗಿಲು ಗ್ರಾಮದಲ್ಲಿ ನೆಲೆಸಿದ್ದ ವೀರಶೈವ ಸಮುದಾಯಕ್ಕೆ ಸೇರಿದ್ದ ಹುಚ್ಚಪ್ಪಸ್ವಾಮಿ ಎಂಬ ವ್ಯಕ್ತಿ ಶಿಕಾರಿಪುರದ ಬ್ರಾಹ್ಮಣ ಕುಟುಂಬಗಳೊಂದಿಗೆ ಉತ್ತಮ ಸ್ನೇಹ ಬೆಳೆಸಿಕೊಂಡು ಕೊನೆಗೆ ಬ್ರಾಹ್ಮಣ ಧೀಕ್ಷೆಯನ್ನು ಪಡೆಯುತ್ತಾರೆ ಮತ್ತು ಇಲ್ಲಿಯೇ ಮಠವೊಂದನ್ನು ನಿರ್ಮಿಸಿಕೊಂಡಿರುತ್ತಾರೆ. ಒಮ್ಮೆ ಹನುಮಂತ ದೇವರು ಹುಚ್ಚಪ್ಪಸ್ವಾಮಿ ಅವರ ಸ್ವಪ್ನದಲ್ಲಿ ಬಂದು ಊರಿನ ಸಮೀಪದ ದೊಡ್ಡ ಕೆರೆಯಲ್ಲಿ ತನ್ನ ವಿಗ್ರಹವಿದ್ದು ಅದನ್ನು ಹೊರತೆಗೆದು ಪ್ರತಿಷ್ಟಾಪಿಸುವಂತೆ ಅಪ್ಪಣೆಯಾಗುತ್ತದೆ. ಮರುದಿನ ಊರಿನ ಪ್ರಮುಖರಿಗೆ ವಿಷಯ ತಿಳಿಸಿದಾಗ ಕೆಲವರು ಅಪಹಾಸ್ಯ ಮಾಡುತ್ತಾರೆ. ಕೆಲವರು ಉಪೇಕ್ಷೇ ಮಾಡದೆ ಹುಚ್ಚಪ್ಪಸ್ವಾಮಿ ತೋರಿಸಿದ ಕಡೆ ಪರಿಶೀಲಿಸಲಾಗಿ ಚೌಕಾಕಾರದಲ್ಲಿದ್ದ ಕಲ್ಲಿನ ಬಾನಿಯೊಂದು ಮಗುಚಿಕೊಂಡಿರುವಂತೆ ಗೋಚರಿಸುತ್ತದೆ. ಅತ್ಯಂತ ಕತೂಹಲದಿಂದ ಅಂಗಾತ ಮಾಡಿದಾಗ ಅದರಲ್ಲಿ ಸುಂದರ ಹನುಂತ ದೇವರ ವಿಗ್ರಹ ಇರುವುದು ಪತ್ತೆಯಾಗುತ್ತದೆ. ಸುಮಾರು ನಾಲ್ಕು ಅಡಿ ಆಳ ಆರು ಅಡಿಗಳಷ್ಟು ಉದ್ದದ ಈ ಬಾನಿಯಲ್ಲಿದ್ದ ಪ್ರಸನ್ನ ಆಂಜನೇಯಸ್ವಾಮಿಯ ವಿಗ್ರಹವನ್ನು ಹೊರತೆಗೆಯಲಾಗುತ್ತದೆ. ಈ ಕಲ್ಲಿನ ಬಾನಿ ಈಗಲೂ ದೇವಾಲಯದ ಆವರಣದಲ್ಲಿದೆ. ಎಲ್ಲಿ ಪ್ರತಿಷ್ಟಾಪಿಸಬೇಕು ಎಂಬ ವಿಷಯ ಬಂದಾಗ ಹುಚ್ಚಪ್ಪಸ್ವಾಮಿ ಅವರ ಮಠವೇ ಸೂಕ್ತವೆಂದಾಗುತ್ತದೆ. ಈ ದೇವರಿಗೆ ತನ್ನ ಹೆಸರಿಡುವುದಾದರೆ ಮಠದಲ್ಲಿ ಜಾಗಕೊಡುವುದಾಗಿ ಹುಚ್ಚಪ್ಪಸ್ವಾಮಿ ಹೇಳುತ್ತಾರೆ. ಈ ಷರತ್ತಿನ ಮೇಲೆ ಮಠದಲ್ಲೆ ದೇವರ ಪ್ರತಿಷ್ಟಾಪಿಸಲಾಗುತ್ತದೆ. ಅಂದಿನಿಂದ ಈ ದೇವರಿಗೆ ಹುಚ್ಚರಾಯಸ್ವಾಮಿ ಎಂಬ ಹೆಸರಿನಿಂದ ಕರೆಯಲಾಗುತ್ತದೆ.
ವಿಜಯನಗರ ಅರಸ ಶ್ರೀಕೃಷ್ಣದೇವಾರಾಯನ ಅಸ್ಥಾನದ ಗುರುಗಳಾಗಿದ್ದ ಶ್ರೀ ವ್ಯಾಸರಾಯಸ್ವಾಮಿಗಳು ಮುಕ್ತಿ ಮಾರ್ಗದ ಬೋಧನೆ ಹಾಗೂ ಧರ್ಮಜಾಗೃತಿ ಮಾಡುತ್ತ ಕನ್ನಡ ನಾಡಿನಲ್ಲಿ ಸಂಚರಿಸುತ್ತಿದ್ದಾಗ ಮಲೆನಾಡ ಪ್ರಕೃತಿಯ ಮಡಿಲಾದ ಶಿಕಾರಿಪುರಕ್ಕೆ ಆಗಮಿಸುವರು. ಇಲ್ಲಿನ ಹನುಮಂತ ದೇವರ ವಿಗ್ರಹ ಭಿನ್ನವಾಗಿರುವುದನ್ನು ಗಮನಿಸುತ್ತಾರೆ. ಹಂಪೆಯಲ್ಲಿ ಯಂತ್ರೋದ್ದಾರ ಹನುಮಂತ ದೇವರನ್ನು ಪ್ರತಿಷ್ಟಾಪಿಸಿ ಒಲಿಸಿಕೊಂಡಿದ್ದ ಸ್ವಾಮಿಗಳು ಶಿಕಾರಿಪುರದಲ್ಲಿ ಆಂಜನೇಯಸ್ವಾಮಿಯನ್ನು ಪ್ರತಿಷ್ಟಾಪಿಸುವ ಕೈಂಕಾರ್ಯಕ್ಕೆ ಮುಂದಾಗುತ್ತಾರೆ. ಆಗ ಸಮೀಪದ ಬಳ್ಳಿಗಾವಿಯಿಂದ ಮೂಲ ವಿಗ್ರಹದ ಯಥಾವತ್ ಆಂಜನೇಯಸ್ವಾಮಿಯ ವಿಗ್ರಹವನ್ನು ಕೆತ್ತಿಸಲಾಗುತ್ತದೆ. ಅದನ್ನು ತರುವ ಕಾರ್ಯದಲ್ಲಿ ದೇವರ ನಾಸಿಕ ಭಾಗ ಭಗ್ನವಾಗುತ್ತದೆ. ಭಗ್ನವಾದ ವಿಗ್ರಹ ಪೂಜೆಗೆ ಶ್ರೇಷ್ಟವಲ್ಲವಾದ್ದರಿಂದ ಜನತೆ ಮತ್ತೆ ಜಿಜ್ಞಾಸೆಗೊಳಗಾಗುತ್ತಾರೆ. ಆಗ ವ್ಯಸರಾಯರ ಸಲಹೆಯಂತೆ ಉತ್ತರ ಭಾರತದ ಹಿಮಾಚಲದಿಂದ ಸಾಲಿಗ್ರಾಮವನ್ನು ತಂದು ನಾಸಿಕ ಭಾಗದಲ್ಲಿ ಜೋಡಿಸಿ ಪ್ರತಿಷ್ಟಾಪಿಸಲಾಗಿರುತ್ತದೆ. ಈ ವೆತ್ಯಾಸವನ್ನು ವಿಗ್ರಹದಲ್ಲಿ ಈಗಲೂ ಕಾಣಬಹುದಾಗಿದೆ.
ನಂತರದ ಕಾಲಮಾನದಲ್ಲಿ ಸ್ಥಳ ಮಹಿಮೆಯು ಪ್ರಸಿದ್ದಿಗೆ ಬಂದು ಆಗಿನ ಪಾಳೇಗಾರರು ಶುದ್ದ ದ್ರಾವಿಡ ಶೈಲಿಯಲ್ಲಿ ಕಲ್ಲಿನ ದೇವಾಲಯ ನಿರ್ಮಿಸುತ್ತಾರೆ. ಪಾಳೇಗಾರರೇ ದೇವಾಲಯ ನಿರ್ಮಿಸಿದ್ದಾರೆ ಎಂಬುದಕ್ಕೆ ದೇವಾಲಯದ ಸುತ್ತಲೂ ಇರುವ ಕಲ್ಲಿನ ಕಸುರಿ ಕೆತ್ತನೆ ಕಲೆ ಸಾಕ್ಷಿಯಾಗಿವೆ.
ಷಾಜಿ ಸೈನ್ಯದಲ್ಲಿದ್ದು ಬ್ರಟೀಷರ ವಿರುದ್ದದ ಸ್ವಾತಂತ್ರ ಹೋರಟದಲ್ಲಿ ಧೋಂಡೀಯಾ ವಾಘ ಎಂಬ ಮರಾಠ ಸರದಾರ ಬ್ರಿಟೀಷ್ ಸೈನಿಕರಿಂದ ತಪ್ಪಿಸಿಕೊಂಡು ಬಿದನೂರು ಅರಸರ ನೆರವು ಪಡೆಯಲು ಬರುತ್ತಾನೆ. ಚಿತ್ರದುರ್ಗ ಹಾಗೂ ಮಂಗಳೂರು ರೆಸಿಡೆಂಟರು ಬೇಟೆ ನಾಯಿಯಂತೆ ಬೆನ್ನುಹತ್ತಿದಾಗ ಶಿಕಾರಿಪುರಕ್ಕೆ ಬಂದ ಧೋಂಡೀಯ ವಾಘ ಶ್ರೀ ಹುಚ್ಚರಾಯಸ್ವಾಮಿಗೆ ಹರಕೆ ಕಟ್ಟಿಕೊಳ್ಳುತ್ತಾನೆ. ತಾನು ಬ್ರಿಟೀಷ್ ಖೈದಿಯಾಗದೆ ಬಿದನೂರು ಅರಸರ ಬಳಿ ಹೋಗುವಂತಾದರೆ ತನ್ನ ಖಡ್ಗವನ್ನು ಸಮರ್ಪಿಸುವುದಾಗಿ ಬೇಡಿಕೊಳ್ಳುತ್ತಾನೆ. ಆಗ ಅಪರೂಪದ ವರ್ಷಧಾರೆ ಸುರಿದು ಶಿಕಾರಿಪುರದ ಜೀವನದಿ ಕುಮದ್ವಿತಿ ತುಂಬಿ ಹರಿಯುತ್ತಾಳೆ. ಬ್ರಿಟೀಷ್ ಸೈನಿಕರು ನದಿ ದಾಟಿ ಬರಲಾರದೆ ಹಿಂತಿರುಗುತ್ತಾರೆ ನಂತರ ಧೋಂಡಿಯಾವಾಘ ತಾನು ಹೇಳಿದಂತೆ ಯುದ್ದ ಖಡ್ಗವನ್ನು ದೇವರಿಗೆ ಸಮರ್ಪಿಸುತ್ತಾನೆ. ಇದು ಈಗಲೂ ದೇವಾಲಯದಲ್ಲಿದೆ. ಅಲ್ಲದೆ ಹುಚ್ಚಪ್ಪಸ್ವಾಮಿ ಪ್ರತಿಷ್ಟಾಪಿಸಿ ಭಗ್ನವಾಗಿದ್ದ ಮೂಲದೇವರ ವಿಗ್ರಹ ಕೂಡ ದೇವಾಲಯದ ಪೌಳಿಯ ಗೋಡೆಯಲ್ಲಿ ಪ್ರದರ್ಶನಕ್ಕಿಡಲಾಗಿದೆ.
ಸಾಲಿಗ್ರಾಮ ಹೊಂದಿರುವ ಮೂರು ದೇವರನ್ನು ಶ್ರದ್ದಾಭಕ್ತಿಯಿಂದ ಒಂದೇ ದಿನದಲ್ಲಿ ದರ್ಶನ ಮಾಡಿದರೆ ದೇವರ ಅನುಗ್ರಹ ಸಿಗುತ್ತದೆ ಎಂಬ ನಂಬಿಕೆ ಇದೆ. ಅಂತೆಯೇ ಶಿಕಾರಿಪುರದ ಭ್ರಾಂತೇಶ, ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕಿನ ಕದರಮಂಡಲಗಿಯಲ್ಲಿರುವ ಕಾಂತೇಶ ಹಾಗೂ ದಾರವಾಡ ಜಿಲ್ಲೆ ಸಾತೇನಹಳ್ಳಿಯ ಶಾಂತೇಶ ದೇವರನ್ನು ಶ್ರದ್ದಾ ಭಕ್ತಿಯಿಂದ ಉಪವಾಸವಿದ್ದು ಒಂದೇ ದಿನ ದರ್ಶನ ಮಾಡಿದರೆ ಕಾಶೀಯಾತ್ರೆ ಮಾಡಿದಷ್ಟೇ ಪುಣ್ಯ ಬರುತ್ತದೆ ಮತ್ತು ತಮ್ಮ ಇಷ್ಟಾರ್ಥಗಳು ಸಿದ್ದಿಯಾಗುತ್ತವೆ ಎಂಬುವುದು ಪ್ರತೀತಿ. ಸಾಲಿಗ್ರಾಮ ಧರ್ಶನ ಮಾತ್ರದಿಂದ ಪಾಪ ಪರಿಹಾರ ಹಾಗೂ ಪವಿತ್ರತೆಯ ಮನಸುಳ್ಳವರಾಗುವರು. ಆದ್ದರಿಂದ ಸಾಲಿಗ್ರಾಮಕ್ಕೆ ತುಳಸಿ ಅರ್ಚನೆ, ಪುರುಷಸೂಕ್ತ, ಶ್ರೀ ಸೂಕ್ತ, ಪವಮಾನ ಅಭಿಷೇಕ, ಅಷ್ಟಗಂಧದ ಅಲಂಕಾರ, ಬೆಣ್ಣೆ ಅಲಂಕಾರ,ವಿಳ್ಯದೆಲೆಯ ಅಲಂಕಾರ ಬಹಳ ವಿಶೇಷವಾಗಿದೆ.
ಶ್ರೀ ಹುಚ್ಚರಾಯಸ್ವಾಮಿ ದೇವಸ್ಥಾನಕ್ಕೆ ಬರುವ ಭಕ್ತರು ಸಂತಾನ ಪ್ರಾಪ್ತಿಗಾಗಿ ಪ್ರಾರ್ಥಿಸಿ ಎದುರುಗಡೆ ಸಂತಾನ ಚೌಡಮ್ಮ (ಮಕ್ಕಳ ಚೌಡಮ್ಮ) ದೇವಾಲಯಕ್ಕೆ ಹರಕೆ ಮಾಡಿಕೊಂಡರೆ ಸಂತಾನ ಪ್ರಾಪ್ತಿಯ ಫಲ ಸಿಗುತ್ತದೆ. ಶ್ರೀ ಹುಚ್ಚರಾಯ ಸ್ವಾಮಿಯನ್ನು ಶ್ರೀ ಭ್ರಾಂತೇಶನೆಂಬ ನಾಮಾಂಕಿತದಿಂದ ಕರೆಯುವುದರಿಂದ ಭ್ರಾಂತಿಯನ್ನ ಅರ್ಥಾತ್ ಭ್ರಮೆಯನ್ನ ದೂರ ಮಾಡುವನು ಆಗಿದ್ದು, ಇದರಿಂದ ರಾಹು ದೋಷ ಪರಿಹಾರಕ್ಕೆ ಸೂಕ್ತವಾದ ದೇವಸ್ಥಾನವಾಗಿದೆ. ದುಷ್ಟ ಸ್ವಪ್ನ, ಶತ್ರು ಬಾದೆ, ದೃಷ್ಟಿದೋಷ, ಬಾಲಗ್ರಹ ಈ ದೋಷ ಪರಿಹಾರಕ್ಕೆ ಯಂತ್ರ, ಅಂತರ್ ಕಾಯಿ, ಕಪ್ಪುದಾರ, ಕುಂಕುಮ, ದೇವರ ಬೆವರು ಇತ್ಯಾದಿ ಪರಿಹಾರಗಳಿಂದ ಭಕ್ತರಿಗೆ ಅನುಗ್ರಹಿತವಾಗಿದೆ.
ಶ್ರೀ ಹುಚ್ಚರಾಯಸ್ವಾಮಿಯನ್ನು ರುದ್ರಾಂಶ ಸಂಭೂತ ಎಂದು ಶಾಸ್ತ್ರಹೇಳುವುದರಿಂದ ರುದ್ರಾಭಿಷೇಕ ಬಹಳ ವಿಶೇಷವಾಗಿದೆ ದೇವಸ್ಥಾನದ ಪ್ರಕಾರದಲ್ಲಿ ರುದ್ರಾಂಶವಾಗಿರುವ ಭೂತಪ್ಪನ ಸಾನಿದ್ಯವಿದೆ. ಶ್ರೀ ಆಂಜನೇಯ ಮತ್ತು ಭೂತಪ್ಪನಿಗೆ ಬಾಳೆಹಣ್ಣಿನ ಸೇವೆ ನೈವಿದ್ಯ ವಿಶೇಷವಿರುತ್ತದೆ.
ಈ ದೇವಾಲಯದಲ್ಲಿ ಬೆಳಗಿನ ಜಾವ ಬ್ರಾಹ್ಮಿ ಮೂಹರ್ತದಲ್ಲಿ ಸ್ವಾಮಿಗೆ ಮಡಿ ನೀರಿನಿಂದ ಅಭಿಷೇಕ ಮಾಡಲಾಗುತ್ತದೆ ಹಾಗೂ ಪವಮಾನ, ರುದ್ರಾಭಿಷೇಕ, ಅಷ್ಟಗಂಧ ಅರ್ಚನೆ ನಡೆಸಲಾಗುತ್ತದೆ. ವಿಶೇಷಪೂಜೆಗಳು, ವಿಳ್ಯದೆಲೆ ಅಲಂಕಾರಗಳು, ಬೆಣ್ಣೆ ಅಲಂಕಾರಗಳು ಇಲ್ಲಿನ ವಿಶೇಷವಾಗಿವೆ. ದೇವಾಲಯಕ್ಕೆ ಭಕ್ತರುಗಳು ಪ್ರತಿ ಶನಿವಾರ ಹೆಚ್ಚಿನ ಸಂಖ್ಯೆಯಲ್ಲಿ ಬಂದು ದರ್ಶನ ಪಡೆದುಕೊಳ್ಳುತ್ತಾರೆ. ಪ್ರತಿ ವರ್ಷ ಏಪ್ರಿಲ್ ತಿಂಗಳ ಜೈತ್ರ ಶುದ್ದ ದಶಮಿಯಂದು ಸ್ವಾಮಿಯ ಜಾತ್ರೆ ನಡೆಸಲಾಗುತ್ತದೆ. ಅಂದು ಸಂಜೆ ಗರುಡ, ಅಶ್ವ, ಗಜ, ಉತ್ಸವಗಳು, ತಿರುಗಣಿ ಅಥವಾ ಚಕ್ರ ರಥೋತ್ಸವಗಳು, ಪುಷ್ಪ ರಥೋತ್ಸವ ಹಾಗೂ ದವನದ ಹುಣ್ಣಿಮೆ ಬೆಳಗಿನ ಸಮಯದಲ್ಲಿ ನಡೆಯುವ ಬ್ರಹ್ಮ ರಥೋತ್ಸವಗಳು ವೈಭವವಾಗಿ ಜರುಗುತ್ತದೆ. ಭಕ್ತರು ಶ್ರದ್ದಾ ಭಕ್ತಿಯಿಂದ ದೇವರನ್ನು ಆರಾಧಿಸುತ್ತಾರೆ.
ಸುಮಾರು ನಾಲ್ಕೈದು ಶತಮಾನದ ಪ್ರಾಚೀನತೆಯನ್ನು ಹೊಂದಿರುವ ಈ ದೇವಾಲಯ ಕಾಲಕಾಲಕ್ಕೆ ಭಕ್ತಾಧಿಗಳ ಅಪೇಕ್ಷೆಯಂತೆ ಜೀರ್ಣೋದ್ದಾರ ಆಗುತ್ತ ಬಂದಿದೆ. ಮೂಲ ದೇವಾಲಯದಲ್ಲಿ ಗರ್ಭಗುಡಿ ಮತ್ತು ಮುಂದಿನ ಪ್ರಾಕಾರ ಕಲ್ಲಿನ ಕಟ್ಟಡವಾಗಿದ್ದು, ಮುಂದಿನ ಪೌಳಿ ಹಂಚಿನದಾಗಿತ್ತು. ಶ್ರೀ ಕ್ಷೇತ್ರ 2010 ರ ಬಳಿಕ ಜೀರ್ಣೋದ್ದಾರವಾಗಿದೆ. ಪೌಳಿ, ಪ್ರಾಂಗಣವನ್ನು ನವೀಕರಿಸಲಾಯಿತು ಇದೀಗ ನವೀಕರಣಗೊಂಡ ಭಾಗದಲ್ಲಿ ದೇವಾಲಯದ ಮುಖ್ಯ ದ್ವಾರ, ಪ್ರಾಂಗಣ, ಹಜಾರ, ವಿಮಾನಗೋಪುರ ನಿರ್ಮಿಸಲಾಗಿದೆ ಈ ಗೋಪುರದಲ್ಲಿ ಆಂಜನೇಯನ ದೊಡ್ಡ ವಿಗ್ರಹವಿದ್ದು ಭಕ್ತರನ್ನು ಆಕರ್ಷಿಸುತ್ತದೆ. ದೇವಾಲಯದ ಮುಂಭಾದಲ್ಲಿರುವ ಹುಚ್ಚರಾಯಕೆರೆಯನ್ನು ಅಭಿವೃದ್ದಿ ಪಡಿಸಲಾಗಿದ್ದು ಬೃಹತ್ ಈಶ್ವರನ ಪ್ರತಿಮೆಯೊಂದಿಗೆ ಸುಂದರ ಉದ್ಯಾನ ನಿರ್ಮಿಸಲಾಗಿದೆ. ದೇವಾಲಯದ ಹಿಂಭಾಗದಲ್ಲಿ ಶ್ರೀ ಭ್ರಾಂತೇಶ ಸಮುದಾಯ ಭವನವನ್ನು ನಿರ್ಮಿಸಲಾಗಿದೆ. ಒಟ್ಟಾರೆ ಈ ಐತಿಹಾಸಿಕ ಶ್ರೀ ಕ್ಷೇತ್ರ ಭಕ್ತಿಯ ಪುಣ್ಯ ಕ್ಷೇತ್ರವಷ್ಟೆ ಅಲ್ಲದೇ ಸುಂದರ ಪ್ರೇಕ್ಷಣೀಯ ಸ್ಥಳವಾಗಿಯೂ ಕಂಗೊಳಿಸುತ್ತಿದೆ.