ಶ್ರಿ ಬೇಟೆರಾಯ ಸ್ವಾಮಿ ದೇವಾಲಯ ತುರುವೇಕೆರೆ, ತುಮಕೂರು, ತುಮಕೂರು .
Sri Beteraya Swamy Temple Turuvekere, Tumakuru, Tumakuru District [TM000269]
×
Temple History
ಇತಿಹಾಸ
ಶ್ರೀ ಬೇಟೆರಾಯಸ್ವಾಮಿ ದೇವಸ್ಥಾನವು ತುಮಕೂರು ಜಿಲ್ಲೆ ತುರುವೇಕೆರೆ ಪಟ್ಟಣದಲ್ಲಿ ನೆಲೆಸಿದೆ. ತುರುವೇಕೆರೆಯ ಹೃದಯಬಾಗದಲ್ಲಿರುವುದು ವಿಶೇಷವೇ ಸರಿ. ಈ ದೇವಾಲಯವು ಅದ್ಬುತವಾದ ಸ್ಮಾರಕವಾಗಿ ಬೆಳಗುತ್ತಿದೆ. ದ್ವಾಪರ ಯುಗಾಂತ್ಯಕ್ಕೆ ಬದರಿಕಾಶ್ರಮದವಾಸಿಗಳಾದ ಮೃಕುಂಡು ಮುನೀಶ್ವರರು ಮತ್ತು ಚಂದ್ರಚೂಡಾಮುನಿಗಳು ತೀರ್ಥಯಾತ್ರೆ ನಿಮಿತ್ತ ಸಂಚಾರ ಮಾಡಿಕೊಂಡು ಬರುವಲ್ಲಿ ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮರುಳಾಗಿ ಇಲ್ಲಿಯೇ ತಪಸ್ಸು ಮಾಡಿಕೊಂಡಿದ್ದರು. ಹೀಗಿರುವಾಗ ಮಾಯಾವಿಗಳಾದ ರಾಕ್ಷಸರು ಮೃಗಿ ರೂಪವನ್ನು ಧರಿಸಿಕೊಂಡು ದೇವತೆಗಳನ್ನೂ, ತಪಸ್ವಿಗಳನ್ನೂ, ಪ್ರಜೆಗಳನ್ನೂ, ಹಿಂಸಿಸುತ್ತಿರಲಾಗಿ ದೇವತೆಗಳು ಭಗವಂತನಾದ ಶ್ರೀ ಮಹಾವಿಷ್ಣುವನ್ನು ಕುರಿತು ತಮಗೆ ಪ್ರಾಪ್ತವಾಗಿರುವ ಭಯ, ಕಷ್ಟಗಳನ್ನು ನಿವಾರಣೆ ಮಾಡಬೇಕೆಂದು ವಿಜ್ಞಾಪನೆ ಮಾಡಲಾಗಿ, ಶ್ರೀ ಮಹಾವಿಷ್ಣುವು ದುಷ್ಟ ನಿಗ್ರಹ ಶಿಷ್ಟಪರಿಪಾಲನೆಗಾಗಿ ಅಶ್ವಾರೂಡನಾಗಿ ಬಂದು ರಾಕ್ಷಸರನ್ನು ಸಂಹರಿಸಿದನು. ಆದ್ದರಿಂದಲೆ ಸ್ವಾಮಿಗೆ ಶ್ರೀ ಬೇಟೆರಾಯ ಎಂದು ಹೆಸರು ಬಂದಿದೆ. ನಂತರ ನಾಗನದಿ ತೀರದಲ್ಲಿ ತಪಸ್ಸನ್ನಾಚರಿಸುತ್ತಿದ್ದ ಮೃಕಂಡು...ಶ್ರೀ ಬೇಟೆರಾಯಸ್ವಾಮಿ ದೇವಸ್ಥಾನವು ತುಮಕೂರು ಜಿಲ್ಲೆ ತುರುವೇಕೆರೆ ಪಟ್ಟಣದಲ್ಲಿ ನೆಲೆಸಿದೆ. ತುರುವೇಕೆರೆಯ ಹೃದಯಬಾಗದಲ್ಲಿರುವುದು ವಿಶೇಷವೇ ಸರಿ. ಈ ದೇವಾಲಯವು ಅದ್ಬುತವಾದ ಸ್ಮಾರಕವಾಗಿ ಬೆಳಗುತ್ತಿದೆ. ದ್ವಾಪರ ಯುಗಾಂತ್ಯಕ್ಕೆ ಬದರಿಕಾಶ್ರಮದವಾಸಿಗಳಾದ ಮೃಕುಂಡು ಮುನೀಶ್ವರರು ಮತ್ತು ಚಂದ್ರಚೂಡಾಮುನಿಗಳು ತೀರ್ಥಯಾತ್ರೆ ನಿಮಿತ್ತ ಸಂಚಾರ ಮಾಡಿಕೊಂಡು ಬರುವಲ್ಲಿ ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮರುಳಾಗಿ ಇಲ್ಲಿಯೇ ತಪಸ್ಸು ಮಾಡಿಕೊಂಡಿದ್ದರು. ಹೀಗಿರುವಾಗ ಮಾಯಾವಿಗಳಾದ ರಾಕ್ಷಸರು ಮೃಗಿ ರೂಪವನ್ನು ಧರಿಸಿಕೊಂಡು ದೇವತೆಗಳನ್ನೂ, ತಪಸ್ವಿಗಳನ್ನೂ, ಪ್ರಜೆಗಳನ್ನೂ, ಹಿಂಸಿಸುತ್ತಿರಲಾಗಿ ದೇವತೆಗಳು ಭಗವಂತನಾದ ಶ್ರೀ ಮಹಾವಿಷ್ಣುವನ್ನು ಕುರಿತು ತಮಗೆ ಪ್ರಾಪ್ತವಾಗಿರುವ ಭಯ, ಕಷ್ಟಗಳನ್ನು ನಿವಾರಣೆ ಮಾಡಬೇಕೆಂದು ವಿಜ್ಞಾಪನೆ ಮಾಡಲಾಗಿ, ಶ್ರೀ ಮಹಾವಿಷ್ಣುವು ದುಷ್ಟ ನಿಗ್ರಹ ಶಿಷ್ಟಪರಿಪಾಲನೆಗಾಗಿ ಅಶ್ವಾರೂಡನಾಗಿ ಬಂದು ರಾಕ್ಷಸರನ್ನು ಸಂಹರಿಸಿದನು. ಆದ್ದರಿಂದಲೆ ಸ್ವಾಮಿಗೆ ಶ್ರೀ ಬೇಟೆರಾಯ ಎಂದು ಹೆಸರು ಬಂದಿದೆ. ನಂತರ ನಾಗನದಿ ತೀರದಲ್ಲಿ ತಪಸ್ಸನ್ನಾಚರಿಸುತ್ತಿದ್ದ ಮೃಕಂಡು ಮುನೀಶ್ವರರಿಗೆ ಮತ್ತು ಚಂದ್ರಚೂಡಾಮುನಿಗಳು ಇವರಿಗೆ ದರ್ಶನ ನೀಡಿ ಇಷ್ಠಾರ್ಥ ಕೇಳಿ ಎಂದಾಗ ಋಷಿಗಳು ಭಗವಂತನನ್ನು ಕುರಿತು ಇಲ್ಲೇ ವಾಸ ಮಾಡಿ ಭಕ್ತರನ್ನು ರಕ್ಷಿಸುತ್ತಾ ಅವರ ಪೂಜೆ ಆರಾಧನೆ ಸ್ವೀಕರಿಸಬೇಕೆಂದು ಕೇಳುತ್ತಾರೆ. ಅವರ ಕೋರಿಕೆಗೆ ಸ್ಪಂದಿಸಿದ ಭಗವಂತನಾದ ಶ್ರೀ ಮಹಾವಿಷ್ಣು ಮುಂದೆ ಕಲಿಯುಗದಲ್ಲಿ ಚೌಡಯ್ಯನವರಿಗೆ ಪ್ರಸನ್ನರಾಗಿ ಶ್ರೀಬೇಟೆರಾಯ ಎಂಬ ನಾಮದಿಂದ ಭಕ್ತರ ಸೇವೆ ಸ್ವೀಕರಿಸುವುದಾಗಿ ತಿಳಿಸುತ್ತಾ. ಆ ಕಾಲ ಬರುವವರೆಗೂ ಈ ಮಡುವಿನಲ್ಲಿ ಜಲಾದಿವಾಸ ಮಾಡುವುದಾಗಿ ಹೆಳುತ್ತಾರೆ. ಅಲ್ಲದೆ ಬ್ರಹ್ಮದೇವನು ಪ್ರತಿ ನಿತ್ಯದಲ್ಲಿಯೂ ಇಲ್ಲಿಗೆ ಹಂಗರ ಪಕ್ಷಿ ರೂಪದಲ್ಲಿ ಬಂದು ನನ್ನನ್ನು ಅರ್ಚನೆ ಮಾಡಿಕೊಂಡು ಹೋಗುತ್ತಾನಾದ್ದರಿಂದ ಈ ಮಡುವಿಗೆ ಬ್ರಹ್ಮತೀರ್ಥವೆಂದೂ (ಪಕ್ಷಿವಾಹನಮಡು) ಹೆಸರಾಗಲಿ ಎಂದು ಹರಸುತ್ತಾರೆ. ಮುಂದೆ ಕಲಿಯುಗದಲ್ಲಿ ಮಹಾತಪಸ್ವಿಗಳಾದ ಚೌಡಯ್ಯನವರಿಗೆ ಸ್ವಪ್ನರೂಪದಲ್ಲಿ ಕಾಣಿಸಿದ ಭಗವಂತ ದ್ವಾಪರಯುಗಾಂತ್ಯದಲ್ಲಿ ನಡೆದಿದ್ದ ವೃತ್ತಾಂತವನ್ನೆಲ್ಲ ತಿಳಿಸಿ ಜಲಾದಿವಾಸದಲ್ಲಿ ಶಿಲಾ ರೂಪದಲ್ಲಿರುವ ನನ್ನನ್ನು ಶ್ರಾವಣ ಬಹುಳ ದಶಮಿಯಂದು ಪ್ರತಿಷ್ಟಾಪನೆ ಮಾಡಿ ಆರಾದನೆ ಮಾಡು ಇಲ್ಲೆ ನೆಲೆಸುತ್ತೇನೆ. ಎನ್ನಲಾಗಿ ಅದರಂತೆ ಚೌಡಯ್ಯನವರು ‘ಪಕ್ಷಿವಾಹನ ಮಡು’ (ಬ್ರಹ್ಮತೀರ್ಥ) ವಿನಲ್ಲಿ ಇದ್ದ ಸ್ವಾಮಿಯ ಪ್ರತಿಮೆಯನ್ನು ಹೆಬ್ಬಾರು ಚೌಡಯ್ಯ ಎಂಬ ಶ್ರೋತ್ರೀಯು, ಬ್ರಹ್ಮನಿಷ್ಠರೂ, ಸ್ವಾಮಿಯಿಂದಲೇ ಪ್ರೇರಣೆ ಪಡೆದು ಹುತ್ತದ ಮೇಲೆ ಗೋವು ಹಾಲನ್ನು ಕರೆಯುತ್ತಿದ್ದ ಪವಿತ್ರ ಸ್ಥಳದಲ್ಲಿ ಪ್ರಜೋತ್ಪತ್ತಿ ಸಂವತ್ಸರದ ಶ್ರಾವಣ ಬಹುಳ ದಶಮಿ ದಿನದಂದು (ಶಾಲಿವಾಹನ ಶಕ 1194) ಪ್ರತಿಷ್ಠಾಪಿಸಿರುತ್ತಾರೆ. ಅಂದರೆ 11ನೇ ಶತಮಾನದಲ್ಲಿ ಪ್ರತಿಷ್ಠಾಪಿಸಿರುತ್ತಾರೆ. ಅಂದಿನಿಂದ ಚೌಡಯ್ಯನವರು ‘ವರದಬೇಟೆರಾಯ’ ಎಂದೇ ನಾಮಾಂಕಿತಗೊಂಡರು. ಕಾಲ ಕ್ರಮೆಣ ನೈರುತ್ಯ ಮೂಲೆಯಲ್ಲಿ ಶ್ರೀ ಲಕ್ಷ್ಮೀದೇವಿ ಯವರ ಪ್ರತಿಷ್ಠಾಪನೆಯಾಯಿತು. ಈ ದೇವಾಲಯವು ಶ್ರೀ ಪಾಂಚರಾತ್ರಾಗಮದ ಮತ್ತು ವೈಧಿಕ ವಿಧಿ ವಿಧಾನಗಳಿಂದ ಪ್ರತಿಷ್ಠಾಪನೆಗೊಂಡಿದ್ದು, ಇಂದಿಗೂ ಇದೇ ಸಂಪ್ರದಾಯಕ್ಕನುಗುಣವಾಗಿ ಪೂಜಾದಿ ಕೈಂಕರ್ಯಗಳು ನೆರವೇರುತ್ತದೆ. ಈ ದೇವಾಲಯವು ದಿನೇ ದಿನೇ ಖ್ಯಾತಿಯನ್ನು ಪಡೆಯುತ್ತಿದ್ದು ದಶಕಗಳಿಂದ ಅಸಂಖ್ಯಾತ ಭಕ್ತರ ಆಕರ್ಷಾಣೆಯ ಸ್ಥಳವಾಗಿರುತ್ತದೆ.
ಈ ದೇವಾಲಯದಲ್ಲಿ ನಡೆಯುವ ದೈನಂದಿನ ಸೇವೆಗಳು ಮತ್ತು ಸಂವತ್ಸರಕ್ಕೊಮ್ಮೆ ನಡೆಯುವ ವೈಭವದ ಉತ್ಸವಾದಿಗಳು ಮತ್ತು ಪ್ರತೀವರ್ಷ ಫಾಲ್ಗುಣ ಶುದ್ದ ಕೃತ್ತಿಕಾ ನಕ್ಷತ್ರದ ದಿನ ಅಂಕುರಾರ್ಪಣ, ರೋಹಿಣಿ ನಕ್ಷತ್ರದಲ್ಲಿ ಧ್ವಜಾರೋಹಣ, ಮಘಾ ನಕ್ಷತ್ರದಲ್ಲಿ ರಥೋತ್ಸವ ಉತ್ತರಾ ನಕ್ಷತ್ರದಲ್ಲಿ ಅವಭೃತ ಸ್ನಾನ ನಡೆಯುತ್ತದೆ. ಇವುಗಳು ಇದರ ವಿಶೇಷ. ಮತ್ತು ಅಂಕುರಾರ್ಪಣೆಯ ಮರು ದಿನ ಮಕ್ಕಳಾಗದವರು ಮಕ್ಕಳ ಫಲ ಬಯಸುವವರಿಗೆ ಗರುಡ ಪಟ ಪೂಜೆಯ ನಂತರ ಗರುಡ ಭುಕ್ತಿ ಪ್ರಸಾದ ಸ್ವೀಕರಿಸಿದವರಿಗೆ ಸಂತಾನ ಫಲ ದೊರೆಯುವುದು. ಮತ್ತು ಕುಕ್ಕೆ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥನಕ್ಕೂ ಈ ದೇವಾಲಯಕ್ಕೂ ನಂಟು ಇದೆ ಏನೆಂದರೆ ಕುಕ್ಕೆಯಲ್ಲಿ ನಡೆಯುವಂತೆ ಅವಭೃತ ಸ್ನಾನ ನಡೆಯುವುದು ಇದರ ವಿಶೇಷತೆಯಾಗಿರುತ್ತದೆ. ತುರುವೇಕೆರೆ ಕಿರು ಪರಿಚಯವನ್ನು ನೀಡಬೇಕಾದರೆ, ಈ ಪ್ರದೇಶವು 11ನೇ ಶತಮಾನದಲ್ಲಿ ರಚನೆಯಾಗಿದ್ದು ಹಲವು ಸಂಪ್ರದಾಯ ನಂಬಿಕೆ ಸಂಸ್ಕೃತಿಗೆ ಸೇರಿದ ಹಲವಾರು ಜನರು ಸಾಮರಸ್ಯದಿಂದ ಜೀವಿಸುವ ಸ್ಥಳವಾಗಿರುತ್ತದೆ. ಈ ಎಲ್ಲಾ ಅಂಶಗಳ ಬಗ್ಗೆ ಮೈಸೂರು ಗೆಜೆಟಿಯರ್ ನಲ್ಲಿಯೂ ಮತ್ತು ಮಾರ್ಕಂಡೇಯ ಪುರಾಣ ಗ್ರಂಥದಲ್ಲಿ ಉಲ್ಲೇಖವಿದೆ.
ತುರುವೇಕೆರೆಯು ಹೊಯ್ಸಳ ಬಲ್ಲಾಳರ ಆದಿಪತ್ಯದಲ್ಲಿತ್ತು ಈ ವಂಶದ 10ನೇ ದೊರೆ ಇಮ್ಮಡಿ ವೀರನರಸಿಂಗರಾಯ ಮತ್ತು ರಾಣಿ ಲೋಕಾಂಬಿಕೆಯವರು ಶ್ರೀಸ್ವಾಮಿಯಿಂದ ಪ್ರೇರೇಪಿತರಾಗಿ ಈ ದೇವಾಲಯದ ಜೀರ್ಣೋದ್ಧಾರ ಗೋಳಿಸಿರುತ್ತಾರೆ. ಮತ್ತು ಕೊಡುಗೆಯನ್ನು ನೀಡಿರುತ್ತಾರೆ. ಮುಖ್ಯಸನ್ನಿಧಿ ಸಾಂಸ್ಕೃತಿಕ ರಚನೆ ಮತ್ತು ಸ್ವರೂಪ, ಉತ್ಸವಾದಿ ಸೇವೆಗಳು ಅಭಿವೃದ್ದಿ ಇತ್ಯಾಧಿಗಳಲ್ಲಿ ಈ ದೇವಾಲಯವು ಸ್ಮರಣೀಯವಾದದ್ದು ವಿಶಿಷ್ಟಾದ್ವೈತ ಮತ್ತು ಶ್ರೀ ಪಾಂಚರಾತ್ರಾಗಮ ಸಿದ್ದಾಂತ ಸಾಂಪ್ರದಾಯಕ್ಕೆ ಅನುಗುಣವಾದ ಶ್ರೀ ಮಹಾವಿಷ್ಣುವಿನ ಅಪರಾವತಾರ ಶ್ರೀ ಬೇಟೆರಾಯಸ್ವಾಮಿ ದೇವಾಲಯದ ಜೀರ್ಣೋದ್ಧಾರ ಮತ್ತು ತಮ್ಮ ಬಳಿಯಿದ್ದ ಉತ್ಸವಮೂರ್ತಿಗಳನ್ನು ಈ ದೇವಾಲಯಕ್ಕೆ ಅರ್ಪಿಸಿದರಲ್ಲದೇ, ಮಹಾದ್ವಾರವನ್ನು ಕಟ್ಟಿಸಿ 10 ಗ್ರಾಮಗಳನ್ನು ದತ್ತಿಯಾಗಿ ನೀಡಿರುತ್ತಾರೆ. ಆಡಳಿತದ ಬದಲಾವಣೆಯಿಂದ ಈ ಗ್ರಾಮಗಳ ಸಹಾಯವು ನಿಂತುಹೋಗಿ, ಮಹಾರಾಜ ಇಮ್ಮಡಿ ಕೃಷ್ಣರಾಜ ಒಡೆಯರ್ ರವರು ದೇವಾಲಯದ ಆರ್ಥಿಕ ಸ್ಥಿತಿಯನ್ನು ವೃದ್ದಿಗೊಳಿಸಿದರು. ಪೂರ್ವಕಾಲದಲ್ಲಿ ಈ ಊರಿಗೆ ‘ವಿಜಯನಾರಸಿಂಹಪುರಿ’ ಎಂಬ ಹೆಸರಿದ್ದು ಕ್ರಮೆಣ ತುರು ಕೆರೆ (ಗೋವು ಮತ್ತು ಜಲ ಸಮೃದ್ಧಿಯಿಂದಿರುವ ಊರು) ಯಾಗಿ ತುರುವೇಕೆರೆ (ಧೇನುಪುರಿ) ಎಂಬ ನಾಮಾಂಕಿತದಿಂದ ಪ್ರಸಿದ್ದಿಯಾಗಿದೆ.
ಈ ದೇವಸ್ಥಾನವು ಸ್ಥಾಪನೆಯಾಗಲು ಮುಖ್ಯ ಕಾರಣ ಶ್ರೀ ಮೃಕುಂಡುಮುನಿ ಮತ್ತು ಚಂದ್ರಚೂಡಾ ಮುನಿಗಳ ತಪಸ್ಸಿಗೆ ಮೆಚ್ಚಿದ ಶ್ರೀ ಮಹಾವಿಷ್ಣು ಅವರ ಪ್ರಾರ್ಥನೆಯಂತೆ ಇಲ್ಲೆ ನೆಲೆಸುತ್ತೇನೆ. ಎಂದು ಹಾಗೂ ಭಕ್ತಾಧಿಗಳ ಇಷ್ಠಾರ್ಥಸಿದ್ದಸಲೆಂದು ‘ಪಕ್ಷಿವಾಹನ ಮಡು’ (ಬ್ರಹ್ಮತೀರ್ಥ) ವಿನಲ್ಲಿ ಇದ್ದ ಸ್ವಾಮಿಯ ಪ್ರತಿಮೆಯನ್ನು (ಮೂಲ ಗರ್ಭಗುಡಿಯಲ್ಲಿರುವ ಶ್ರೀ ಬೇಟೆರಾಯ ಸ್ವಾಮಿ ಸುಂದರ ಮೂರ್ತಿಯನ್ನು) ಹೆಬ್ಬಾರು ಚೌಡಯ್ಯ ಎಂಬ ಶ್ರೋತ್ರೀಯ ಬ್ರಹ್ಮನಿಷ್ಠರು ಸ್ವಾಮಿಯಿಂದಲೇ ಪ್ರೇರಣೆ ಪಡೆದು ಹುತ್ತದ ಮೇಲೆ ಗೋವು ಹಾಲನ್ನು ಕರೆಯುತ್ತಿದ್ದ ಪವಿತ್ರ ಸ್ಥಳದಲ್ಲಿ ಪ್ರಜೋತ್ಪತ್ತಿ ಸಂವತ್ಸರದ ಶ್ರಾವಣ ಬಹುಳ ದಶಮಿ ದಿನದಂದು (ಶಾಲಿವಾಹನ ಶಕ 1194) ಪ್ರತಿಷ್ಠಾಪಿಸಿರುತ್ತಾರೆ.
ಈ ದೇವಾಲಯದಲ್ಲಿ ಪ್ರತೀ ವರ್ಷ ಗೋಕುಲಾಷ್ಠಮಿ, ಶ್ರಾವಣ ರಥಸಪ್ತಮಿ, ಬ್ರಹ್ಮರಥೋತ್ಸವ, ವೈಕುಂಠ ಏಕಾದಶಿ, ವಿಜಯದಶಮಿ ಇತರೆ ಹಬ್ಬ ಹರಿದಿನಗಳಂದು ಮಾಸ ವಿಶೇಷ ಪೂಜೆಗಳು ನಡೆಯುತ್ತವೆ. ಈ ದೇವಾಲಯದಲ್ಲಿ ವಿವಾಹ ಅಪೇಕ್ಷೇ ಇರುವವರು ಕಲ್ಯಾಣೋತ್ಸವವನ್ನು ಮಾಡಿಸುವುದಾಗಿ ಹರಕೆಯನ್ನು ಕಟ್ಟಿಕೊಂಡರೆ ವಿವಾಹವಾಗುತ್ತದೆ. ಇವರು ಕಲ್ಯಾಣೋತ್ಸವವನ್ನು ಮಾಡಿಸುತ್ತಾರೆ. ಹಾಗೂ ಸಂತಾನೋತ್ಪತ್ತಿ ಅರಸಿ ಬರುವ ಭಕ್ತಾದಿಗಳ ವಿಶೇಷವಾಗಿ ಪ್ರದಕ್ಷಿಣೆಗಳನ್ನು ಹಾಕಿದ ಭಕ್ತಾಧಿಗಳ ಅಭೀಷ್ಟೆ ಸಿದ್ದಿ ನೆರವೇರುತ್ತದೆ.